ಚಿಕ್ಕ ಪುಸ್ತಕಗಳ ಸುತ್ತ ಬರೆಯುವಾಗ ಖಾಸನೀಸರ ಕತೆಗಳನ್ನು ಓದುವ ಬಗ್ಗೆ ಬರೆದಿದ್ದೆ. ಅನಿರೀಕ್ಷಿತವಾಗಿ ಅವರ ಒಂದು ಕತೆ ಓದುವ ಚಾನ್ಸ್ ಸಿಕ್ತು. ಕುಪರ್ಟಿನೋ ಲೈಬ್ರರಿಯ ಪುಸ್ತಕಗಳ ಸಾಲುಗಳ ಅವಲೋಕನದಲ್ಲಿದ್ದಾಗ ಕನ್ನಡ ಪುಸ್ತಕಗಳೊಂದಷ್ಟನ್ನು ನೋಡಿ ಚಕಿತನಾದೆ. ಅಲ್ಲಿ ಸಿಕ್ಕ ಪುಸ್ತಕ ಆಮೂರರು ಆಯ್ದ ಸಣ್ಣ ಕತೆಗಳ ಸಂಗ್ರಹ, ಸ್ವಾತಂತ್ರ್ಯೋತ್ತರದ ಸಣ್ಣ ಕತೆಗಳು. ಆ ಸಂಗ್ರಹದಲ್ಲೇ ಖಾಸನೀಸರೇ ಒಂದು ಕತೆಯೂ ಇತ್ತು. ತಮಾಷೆಯೆಂದರೆ ಆ ಕತೆಯನ್ನು ಹಿಂದೆ ಯಾವಗಲೋ ಒಮ್ಮೆ ಸುಧಾದಲ್ಲಿ ಓದಿದ ನೆನಪು. ಸುಧಾ ತರಂಗಗಳಲ್ಲಿ ಕತೆಗಳನ್ನು ಓದುತ್ತಿದ್ದಾಗ ಸಾಮಾನ್ಯವಾಗಿ ಎಂತಹ ಕತೆ ಇದ್ದರೂ ಓದಿರುತ್ತಿದ್ದೆನಾದರೂ ಕತೆಗಾರರ ಪರಿಚಯ ಮಾಡಿಕೊಳ್ಳುತ್ತಿದ್ದದ್ದು ಕಡಿಮೆ. ಖಾಸನೀಸ ಇನ್ನು ಯಾವ ಯಾವ ಕತೆಗಳನ್ನು ನಾನಾಗಲೇ ಓದಿದ್ದೇನೋ ಅರಿಯೆ.
ಸರಳವಾಗಿ ಶುರುವಾಗುವ ಕಥೆ ಕೊನೆ ಮುಟ್ಟುವಷ್ಟರಲ್ಲಿ ಇಂಟರೆಸ್ಟಿಂಗ್ ಟುರ್ನ್ ತೆಗೆದುಕೊಳ್ಳುತ್ತದೆ. ಮುಂಗೈಗಳಿಲ್ಲದೊಬ್ಬನ ಮೇಲೆ ಯಾರಾದರೂ ಬಲಾತ್ಕಾರದ ಆಪಾದನೆ ಹೊರಿಸಬಹುದೇ? ಏಕಾಂಗಿಯಾಗಿ ಸಿಕ್ಕಾಗ ಆತನ ಇಚ್ಚೆಯನ್ನೂ ಮೀರಿ ಆತನನ್ನು ಹೊಂದಲು ಬಯಸಿದ ಹೆಣ್ಣೊಬ್ಬಳು ಅವನಿಗೆ ತನ್ನಲ್ಲಿ ಆಸಕ್ತಿಯಿಲ್ಲ ಎನ್ನುವದನ್ನು ಅರಗಿಸಿಕೊಳ್ಳಲಿಕ್ಕಾಗದೇ ಕೋಪದಿಂದ ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡು ಪೋಲೀಸರಿಗೆ ಕಂಪ್ಲೇಂಟ್ ಕೊಡುತ್ತಾಳೆ! ಕಾಮಾತುರಾಣಾಂ ನ ಲಜ್ಜಾ ನ ಭಯಂ ಎನ್ನುವದರ ಜೊತೆಗೆ ವಿವೇಚನೆಯೂ ಇರುವದಿಲ್ಲ ಅಲ್ಲವೆ?
ಇದನ್ನು ಓದಿದ ಮೇಲೆ ಒಂದು ಸಂಶಯ, ನಾನು ಹಿಂದೆ ಸುಧಾದಲ್ಲಿ ಓದಿದ್ದು ಇದೇ ಕತೆಯನ್ನೋ ಅಥವ ಇದರ ಇನ್ನೊಂದು ವರ್ಶನ್ನನ್ನೋ? ಕಥೆಯ ಹಂದರದಲ್ಲಿ ಮತ್ತು ಕೊನೆಯಲ್ಲಿ ಒಂದಷ್ಟು ವ್ಯತ್ಯಾಸವಿದ್ದಂತಿತ್ತು.
ಅದೇ ಸಂಕಲನದಲ್ಲಿ ನನ್ನನ್ನು ಬಹಳವಾಗಿ ಕಾಡಿದ ಕತೆ ನೇಮಿಚಂದ್ರರ ‘ಬದುಕು ಕಾಯುವದಿಲ್ಲ’. ಕತೆಯ ನಾಯಕ ವಿಶುವಿನ ಸ್ಥಳದಲ್ಲಿ ಎಷ್ಟೋ ಬಾರಿ ನನ್ನನ್ನೇ ಕಂಡಂತಾಯಿತು. ‘ನೀನು ಸತ್ತ ಮೇಲೆ ಇತರರು ನಿನ್ನನ್ನು ಹೇಗೆ ನೆನಪಿಟ್ಟುಕೊಂಡಿರಬೇಕೆಂದು ಬಯಸುತ್ತೀ’? ಈ ಪ್ರಶ್ನೆಯನ್ನು ಸ್ಟೀಫನ್ ಕೋವಿಯ ಪುಸ್ತಕದಲ್ಲಿ ಎಲ್ಲರೂ ಓದಿರಬಹುದು. ಅದೇ ರೀತಿ ಸಮಯದ ಸರಿಯಾದ ಉಪಯೋಗಕ್ಕಾಗಿ ದೊಡ್ಡ ಕೆಲಸಗಳ ಕಡೆ ಮೊದಲು ಗಮನ ಕೊಡಿ ಎನ್ನುವದನ್ನೂ. ಇಂತಹ ಎಷ್ಟೊ ಉಪಯುಕ್ತ ಟಿಪ್ಸುಗಳನ್ನು personal development, effective management, ಮುಂತಾದ ಹೆಸರುಗಳಡಿ ಓದಿ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವದಕ್ಕಿಂತ ಬರೀ ಆಫೀಸು ಕೆಲಸಗಳಿಗಷ್ಟೇ ಅವನ್ನಳವಡಿಸಿಕೊಂಡು ಆಫೀಸ್ ಕೆಲಸವೊಂದನ್ನೇ ಮುಖ್ಯ ಕೆಲಸವನ್ನಾಗಿ ಮಾಡಿಕೊಂಡರೆ ಏನಾಗುತ್ತದೆ? ವಿಸ್ಮಯನಿಗಾದಂತೆ ಕೊನೆಗೆ ಜಗತ್ತು, ತನ್ನ ಹೆಂಡತಿ, ಮಕ್ಕಳು ಎಲ್ಲರೂ ತಮ್ಮದೇ ಕಕ್ಷಯಲ್ಲಿ ಸುತ್ತುತ್ತಿರುವತೆಯೂ, ಅವರ ಬಾಳಿನಲ್ಲಿ ತಾನು, ತನ್ನ ಬಾಳಿನಲ್ಲಿ ಅವರು ಇದ್ದರೂ ಎಲ್ಲರೂ ಒಂದೇ ಸೂರಿನಡಿಯ ಅಪರಿಚಿತರೆನಿಸಿಬಿಡುತ್ತದೆ. ವಿಶುನ ಹೆಂಡತಿ ಹೇಳುವ ಮಾತು, “ನನ್ನ ಹತ್ತಿರ ಎಲ್ಲದಕ್ಕೂ ಸಮಯವಿಲ್ಲ, ಆದರೆ ಇದು ಮುಖ್ಯ, ಇದು ಮುಖ್ಯವಲ್ಲ ಎನ್ನುವ ಮನಸ್ಸಿದೆ” ಎನ್ನುವ ಮಾತು ವಿಶುಗೂ ಅನ್ವಯಿಸುತ್ತದೆ. ಆದರೆ ವಿಶುವಿನ ಮುಖ್ಯ ಆಫೀಸೊಂದೇ ಆಗಿಬಿಟ್ಟಿರುತ್ತದೆ!
ಪಶು ಪತ್ನಿ ಸುತ ಆಲಯ ಎಲ್ಲವನ್ನು ಪಡೆಯಲು ಗಂಡು ಪ್ರಯತ್ನಿಸುತ್ತಾನೆ. ಆದರೆ ಆ ಪ್ರಯತ್ನದ ದಾರಿಯಲ್ಲೆಲ್ಲೋ ಯಾವುದಕ್ಕಾಗಿ ಮಾಡುತ್ತಿರುವದೆಲ್ಲ ಎನ್ನುವದನ್ನೇ ಮರೆತು ಮಾಡುವುದೊಂದೇ ಚಟವಾಗಿಬಿಡುವ ಅಪಾಯವಿದ್ದೇ ಇದೆ. ಆದರೆ ಬದುಕು ಕಾಯುವದೇ? ‘Time and tide wait for none’ – ಎಂದೋ ಎಲ್ಲಿಯೋ ಓದಿದ್ದು, ಸಾರ್ವಕಾಲಿಕ ಸತ್ಯ. ಅದೇ ರೀತಿ ಜಗನ್ನಾಥ ದಾಸರ ಈ ಮಾತೂ,
ಅರಿಯದಿರ್ದರು ಎಮ್ಮೊಳಿದ್ದನ
ವರತ ವಿಷಯಗಳುಂಬ ಜ್ಞಾನೋ
ತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ||
ಸರಿತು ಕಾಲ ಪ್ರವಹಗಳು ಕಂ|
ಡರೆಯು ಸರಿ ಕಾಣದಿರೆ ಪರಿವುವು|
ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹವು||
Discussion
Trackbacks/Pingbacks
Pingback: ಹಳೇ ಪುಸ್ತಕಗಳು… « ಪ್ರತಿಬಿಂಬ - February 22, 2009